ಬಳ್ಳಾರಿ ಗ್ರಾಮೀಣ ಕ್ಷೇತ್ರ ಅಂದರೆ ಕಾಂಗ್ರೆಸ್ಗೆ ಹೆದರಿಕೆಯಾಗಬೇಕು. ನಿದ್ದೆ ಯಲ್ಲಿ ಕಾಣಬೇಕು.ಅತ್ಯಂತ ಹೆಚ್ಚಿನ ಮತಗಳಿಂದ ಬಿಜೆಪಿ ಗೆಲ್ಲಿಸಿ: ಬಿ.ಶ್ರೀರಾಮುಲು
ಬಳ್ಳಾರಿ,ಮಾ.27-ನನಗೆ ಜನ್ಮ ನೀಡಿದ, ರಾಜಕೀಯ ಭಿಕ್ಷೆ ನೀಡಿದ ಮತ್ತು ರಾಜಕೀಯವಾಗಿ ಮತ್ತೆ ಪುನಶ್ಚೇತನಕ್ಕೆ ಕಾರಣವಾದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಕಾಂಗ್ರೆಸ್ ಗೆ ನಡುಕ ಉಂಟಾಗುವ ರೀತಿಯಲ್ಲಿ ಬೆಂಬಲಿಸಬೇಕೆಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ಶ್ರೀರಾಮುಲು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಕೌಲ್ ಬಜಾರ್ ಪ್ರದೇಶದಲ್ಲಿ ಬಿಜೆಪಿ ಗ್ರಾಮೀಣ ಘಟಕದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಳ್ಳಾರಿ ಗ್ರಾಮೀಣ ಕ್ಷೇತ್ರವೆಂದರೆ ಕಾಂಗ್ರೆಸ್ ನವರಿಗೆ ಹೆದರಿಕೆಯಾಗಬೇಕು. ಚುನಾವಣಾ ಫಲಿತಾಂಶ ನೋಡಿ ಎಂದಿಗೂ ಗ್ರಾಮೀಣ ಕ್ಷೇತ್ರದತ್ತ ಮುಖ ಮಾಡಬಾರದು. ಅಂಥ ಗೆಲುವನ್ನು ಬಿಜೆಪಿಗೆ ನೀವೆಲ್ಲ ತಂದುಕೊಡಬೇಕೆಂದು ಮನವಿ ಮಾಡಿದರು.
ಕಳೆದ 10 ವರ್ಷದ ಹಿಂದೆ ಬೆಳಗಲ್, ರೂಪನಗುಡಿ, ಮೋಕಾ, ವಣೇನೂರು, ಸಿರಿವಾರ, ಬೆಳಗಲ್ ಮೊದಲಾದೆಡೆ ಬಿಜೆಪಿ ಸರ್ಕಾರ ಕೆರೆಗಳನ್ನು ಅಭಿವೃದ್ಧಿಪಡಿಸಿತ್ತು. ಈ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕಾಂಗ್ರೆಸ್ ಪಕ್ಷವಾಗಲಿ, ಇಲ್ಲಿನ ಶಾಸಕರಾಗಲಿ ಮಾಡಿಲ್ಲ. ಎಲ್ಲ ಕೆರೆಗಳಲ್ಲಿ ಜಾಲಿ ಮುಳ್ಳು ಬೆಳೆದಿದೆ. ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಗ್ರಾಮೀಣ ಕ್ಷೇತ್ರದಲ್ಲಿ ತಟಸ್ಥತಗೊಂಡ ಈ ಎಲ್ಲ ಯೋಜನೆಗಳಿಗೆ ಉತ್ತೇಜನ ಸಿಗಲು ಬಿಜೆಪಿಗೆ ಬೆಂಬಲಿಸಬೇಕು. ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ನನ್ನನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯಂತ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕೆಂದು ಕೋರಿದರು.
ಕೇಂದ್ರದಿಂದ ನೇರವಾಗಿ 60 ಲಕ್ಷ ರೂ. ಗ್ರಾಪಂ ಗೆ ಅನುದಾನ ಹರಿದು ಬರಲಿದೆ. ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಇದರ ಸದ್ಬಳಕೆ ಮಾಡಿಕೊಂಡು ಹಳ್ಳಿಗಳ ಅಭಿವೃದ್ಧಿ ಮಾಡಬೇಕು. ರಾಜ್ಯ ಸರ್ಕಾರವೂ ಕೂಡ ಹಳ್ಳಿಗಳಲ್ಲಿ ರಸ್ತೆ, ಶೌಚಾಲಯ, ನಿವೇಶನ, ಸಿಸಿ ರಸ್ತೆ, ಕೆರೆ ನಿರ್ಮಾಣ, ಹೊಲಗಳ ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು 14,15,16,17 ಮತ್ತು 18ನೇ ಹಣಕಾಸು ಯೋಜನೆಯಡಿ ಅನುದಾನ ಒದಗಿಸುತ್ತಿದೆ. ಗ್ರಾಪಂ ಅಧ್ಯಕ್ಷರಿಗೆ ಮಾಸಿಕ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ರೂ.ಸಹಾಯ ಧನ ಒದಗಿಸಿದೆ. ಬಿಜೆಪಿ ಸರ್ಕಾರದಿಂದ ಮಾತ್ರ ಇಂಥ ಸೌಲಭ್ಯಗಳನ್ನು ನೀಡಲು ಸಾಧ್ಯ ಎಂದರು.
ಸಮಾವೇಶದಲ್ಲಿ ಬಳ್ಳಾರಿ ಗ್ರಾಮಾಂತರ ಪ್ರದೇಶದ 277 ಗ್ರಾಪಂ ಪೈಕಿ 242 ಗ್ರಾಪಂ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಮಾಜಿ ಸಂಸದರಾದ ಎಸ್.ಪಕ್ಕಿರಪ್ಪ, ಜೆ.ಶಾಂತಾ, ಬಿಜೆಪಿ ರಾರ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಮುರಾರಿಗೌಡ, ಉಪಾಧ್ಯಕ್ಷ ಬಿ.ಓಬಳೇಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್, ಮಹಾನಗರ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು, ಗ್ರಾಮಾಂತರ ಕ್ಷೇತ್ರದ ಮುಖಂಡರಾದ ನೂರ್ ಬಾಷಾ, ವಿಕೆ ಬಸಪ್ಪ ಇನ್ನಿತರರು ವೇದಿಕೆ ಮೇಲೆ ಇದ್ದರು.
(ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.
——-