*ಬಿಜೆಪಿಯವರ ಸೊಕ್ಕು ಮುರಿಯಿರಿ: ಶಾಸಕ ನಾರಾ ಭರತ್ ರೆಡ್ಡಿ*
ಬಳ್ಳಾರಿ(25)ಚುನಾವಣೆಯಲ್ಲಿ ಸೋಲಿಸುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎನ್ನುವ ಬಿಜೆಪಿಯವರ ಸೊಕ್ಕನ್ನು ಮುರಿಯಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಬಳ್ಳಾರಿಯ 15ನೇ ವಾರ್ಡಿನ ಕಾಟೇಗುಡ್ಡದ ಬಳಿ ಕೆಸಿ ರಸ್ತೆಯಲ್ಲಿ ಮತ ಯಾಚಿಸಿ ಮಾತನಾಡಿದರು.
ಬಿಜೆಪಿಯವರು ದೇಶದ ಇಬ್ಬರು ಅತಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ, ಆದರೆ ಬಡವರಿಗೆ ಒಂದು ರೂಪಾಯಿ ಕೊಡುವುದಿಲ್ಲ, ಶ್ರೀಮಂತರ ಉದ್ಧಾರ ಮಾಡುವುದು ಬಿಜೆಪಿಯವರಿಗೆ ಮುಖ್ಯ, ಆದರೆ ಬಡವರ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದರು.
ಕೊಟ್ಟ ಮಾತಿನಂತೆ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ, ಬಿಜೆಪಿಯವರು ನಿಮಗೆ ಕೊಟ್ಟಿರುವ ಸವಲತ್ತು ಕಸಿಯುವ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ ಅವರು, ಕಾಟೇಗುಡ್ಡದ ಅಭಿವೃದ್ಧಿಗೆ ಆರೂವರೆ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿರುವೆ, ರಾಯಲ್ ವೃತ್ತದಿಂದ ಅನಂತಪುರ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿರುವೆ ಎಂದರು.
ಕಾಟೇಗುಡ್ಡ ನಿಮ್ಮದಲ್ಲ, ನನ್ನದು, ಇದರ ಅಭಿವೃದ್ಧಿ ನನ್ನ ಕರ್ತವ್ಯ ಎಂದ ಶಾಸಕ ಭರತ್ ರೆಡ್ಡಿ, ವಿಧಾನಸಭೆ ಚುನಾವಣೆ ಮುಗಿದ ಮೇಲೆ ನಿಮ್ಮ ಕೆಲಸ ಮಾಡಿರುವೆ, ನಾನು ಸುಮ್ಮನೇ ಇಲ್ಲಿಗೆ ಬಂದಿಲ್ಲ, ನೀವು ನನ್ನ ಹತ್ತಿರ ಬಂದಾಗ ನಿಮ್ಮ ಕೆಲಸ ಮಾಡಿರುವೆ ಎಂದರು.
ಈಗಿನ ಬಿಜೆಪಿ ಅಭ್ಯರ್ಥಿ ಈ ಹಿಂದೆ ಸಂಸದರಾಗಿದ್ದವರು, ಅವರಿಗೆ ನೀವು ಪ್ರಶ್ನೆ ಮಾಡಬೇಕು, ಹಿಂದೆ ಸಂಸದರಾಗಿದ್ದಾಗ ಏನು ಕೆಲಸ ಮಾಡಿದ್ದೀರಿ? ಸಂಸತ್ತಿನಲ್ಲಿ ಏನು ಪ್ರಶ್ನೆ ಮಾಡಿದ್ದೀರಿ? ಎಂದು ಪ್ರಶ್ನಿಸಬೇಕು, ರಾಜಕೀಯ ಪುನರ್ಜನ್ಮ ನೀಡಬೇಕೆಂದು ಕೇಳುತ್ತಿದ್ದಾರೆ, ಎಷ್ಟು ಸಲ ಪುನರ್ಜನ್ಮ ನೀಡುವುದು? ಎಂದು ಅವರು ಪ್ರಶ್ನಿಸಿದರು.
ಮತ್ತೊಬ್ಬರು ದೇವೇಂದ್ರಪ್ಪ ಅವರು ಸಂಸದರಾಗಿದ್ದರು, ಆದರೆ ಅವರು ಸಂಸತ್ತಿಗೇ ಹೋಗಿಲ್ಲ. ಇಂತವರನ್ನು ಬೆಂಬಲಿಸುವ ಬದಲು ಪ್ರಜ್ಞಾವಂತ ಜನಪರ ನಾಯಕ ಈ.ತುಕಾರಾಂ ಅವರಿಗೆ ಮತ ನೀಡಿ ಎಂದು ಭರತ್ ರೆಡ್ಡಿ ಹೇಳಿದರು.
ಬಿಜೆಪಿಯವರು ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಇದ್ದಾರೆ. ಜಿಲ್ಲೆಗೆ ಅವರು ಈವರೆಗೆ ಒಂದೇ ಒಂದು ಕಾರ್ಖಾನೆ ತರಲಿಲ್ಲ ಎಂದ ಅವರು, ಜಿಲ್ಲೆಯಲ್ಲಿರುವ ಕಾರ್ಖಾನೆಗಳೆಲ್ಲವೂ ಕಾಂಗ್ರೆಸ್ ಸರ್ಕಾರ ಇದ್ದ ಕಾಲದಲ್ಲಿ ಸ್ಥಾಪನೆ ಆದಂತವು ಎಂದರು.
ಪಾಲಿಕೆ ಸದಸ್ಯ ನೂರ್ ಮೊಹಮ್ಮದ್, ಶೋಭಾ, ಬಳ್ಳಾರಿ ಖಾದರ್, ಸೂರಿ, ರಾಮುಡು, ಶಂಕರ್, ಅನು, ಜಾನಿ, ಮಧು ಮೊದಲಾದವರು ಹಾಜರಿದ್ದರು.