ಮೂರು ಸಲ ಗೆದ್ದಿರುವ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ
: ಶಾಸಕ ನಾರಾ ಭರತ್ ರೆಡ್ಡಿ
ಮಾಜಿ ಸಚಿವ ನಾಗೇಂದ್ರ ಅವರನ್ನು ನೋಡಿ ಸಂಭ್ರಮಿಸಿದ ಜನಸಮೋಹ.
ಬಳ್ಳಾರಿ, ಏ.21:
ಮೂರು ಸಲ ಗೆದ್ದು ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ, ಹೀಗಾಗಿ ದೇಶದ ಯುವಜನರು ಅವರಿಗೆ ಪಾಠ ಕಲಿಸುವ ದಿನ ದೂರ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಸೋಮವಾರ ನಗರದ ಗವಿಯಪ್ಪ (ಮೋತಿ) ವೃತ್ತದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಳ್ಳಾರಿ ಸಮಿತಿಯು ಏರ್ಪಡಿಸಿದ್ದ ನೂತನ ವಕ್ಫ್ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ನೂತನ ವಕ್ಫ್ ಕಾಯ್ದೆ ವಿರೋಧಿ ಹೋರಾಟ ಕೇವಲ ಮುಸ್ಲಿಮರ ಹೋರಾಟ ಅಲ್ಲ, ಇದು ನಮ್ಮೆಲ್ಲರಿಗೆ ಸೇರಿದ ವಿಷಯ, ಹೀಗಾಗಿ ನಾವೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ತ್ಯಾಗ ಇದೆ, ಮುಸ್ಲಿಂ ಸಮುದಾಯದ ಸಾವಿರಾರು ಜನ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ್ದಾರೆ, ಇಂದು ನಾವು ಹಿಂದೂ, ಕ್ರೈಸ್ತ್, ದಲಿತ, ಲಿಂಗಾಯತ ಸೇರಿದಂತೆ ಎಲ್ಲ ಧರ್ಮಗಳ ಜನರು ಮುಸ್ಲಿಮರ ಹಕ್ಕುಗಳ ರಕ್ಷಣೆ ಮಾಡಲು ಇಲ್ಲಿ ಸೇರಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಮುಸ್ಲಿಮರ ಹಕ್ಕು ಕಿತ್ತುಕೊಂಡರೆ ನಮ್ಮ ಹಕ್ಕು ಕಿತ್ತುಕೊಂಡಂತೆ ಎಂಬುದನ್ನು ಮರೆಯಬಾರದು ಎಂದ ಅವರು,
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಕ್ತಿಯೇ ನಮ್ಮ ಇಂದಿನ ಹೋರಾಟಕ್ಕೆ ಪ್ರೇರಣೆ ಎಂದರು.
ದೇಶವನ್ನು ಕಾಡುತ್ತಿರುವ ಮುಖ್ಯ ವಿಷಯಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿಸಲು ಬಿಜೆಪಿ ಯತ್ನ ನಡೆಸಿದೆ, ಆದರೆ ಜನರು ಮೂರ್ಖರಲ್ಲ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಾವೆಲ್ಲರೂ ಒಗ್ಗಟ್ಟಾಗಿರಬೇಕು, ಹಿಂದೂ ಮುಸ್ಲಿಂರ ಏಕತೆ ಒಡೆಯುವ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ, ವಕ್ಫ್ ಆಸ್ತಿ ಕಬಳಿಸುವ ಯತ್ನ ನಡೆದಿದೆ, ಮುಂದೊಂದು ದಿನ ನಿಮ್ಮ ಮನೆಯವರೆಗೆ ಇವರು ಬರಬಹುದು, ಆದರೆ ಮುಸ್ಲಿಮರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಈ ದೇಶದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ ಮುಸ್ಲಿಮರಿಗೂ ಕೂಡ ಅಷ್ಟೇ ಹಕ್ಕಿದೆ, ಹೋರಾಟ ಮಾಡುವ ಹಕ್ಕು ಕೂಡ ಮುಸ್ಲಿಮರಿಗಿದೆ ಎಂದ ಅವರು, ಹಿಂದೂಗಳಿಗಿರುವ ಎಲ್ಲ ಹಕ್ಕುಗಳೂ ಮುಸ್ಲಿಮರಿಗಿವೆ ಎಂದರು.
ಸಿಎಎ, ಎನ್ಆರ್ಸಿ, ಹಿಜಾಬ್ ನಂತಹ ವಿಷಯ ಮುಂದಿಟ್ಟು ಮುಖ್ಯ ವಿಷಯಗಳನ್ನು ಮರೆ ಮಾಚಲಾಗುತ್ತಿದೆ, ವಕ್ಫ್ ಬಿಲ್ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಕಣೇಕಲ್ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಪಾಲ್ಗೊಂಡರು.
ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮನವಿ ಸ್ವೀಕರಿಸಿದರು.
ಮಾಜಿ ಸಚಿವ ನಾಗೇಂದ್ರ ಅವರನ್ನು ನೋಡಿ ಸಂಭ್ರಮಿಸಿದ ಜನ ಸಮೋಹ.
ವೇದಿಕೆಯ ಮೇಲೆ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮೇಯರ್ ಮುಲ್ಲಂಗಿ ನಂದೀಶ್, ಎ.ಮಾನಯ್ಯ, ಖಾಜಿ ಗುಲಾಂ ಸಿದ್ದೀಕಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಹುಸೇನ್ ಪೀರಾ, ಭಂ ಭಂ ದಾದಾ, ಕಣೇಕಲ್ ಮೆಹಬೂಬಸಾಬ, ಅಲ್ಲಾಬಕಷ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ಜಬ್ಬಾರ್, ನೂರ್ ಮೊಹಮ್ಮದ್, ಆಸಿಫ್, ನಾಜು, ಮಿಂಚು ಸೀನಾ, ಕುಬೇರಾ, ಪೇರಂ ವಿವೇಕ್, ಗಾದೆಪ್ಪ, ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಅಯಾಜ್, ಶಿವರಾಜ್, ಬಿಆರೆಲ್ ಸೀನಾ, ಗೋವಿಂದ ಸೇರಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.