ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕೆಆರ್ಎಸ್ ಅಭ್ಯರ್ಥಿಗಳು ಕಣಕ್ಕೆ-ಡಾ.ಮಂಜುನಾಥ್
ಬಳ್ಳಾರಿ,ಮಾ.18-ಈ ಬಾರಿ ಏಪ್ರಿಲ್-ಮೇ ಮಾಹೆಯಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ನಿಲ್ಲಿಸಲಿದೆ ಎಂದು ಕೆಆರ್ಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಮಂಜುನಾಥ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಪು ಶ್ರೀನಿವಾಸ ರೆಡ್ಡಿ, ಗ್ರಾಮೀಣ ಕ್ಷೇತ್ರದಿಂದ ಕಾವಲಿ ಮಾರೆಣ್ಣ, ಸಿರುಗುಪ್ಪ ಕ್ಷೇತ್ರದಿಂದ ದೊಡ್ಡ ಯಲ್ಲಪ್ಪ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ. ಉಳಿದ ಕ್ಷೇತ್ರದಲ್ಲಿ ಅಭ್ಯರ್ಥಿಯ ಹುಡುಕಾಟ ನಡೆದಿದೆ ಎಂದರು.
ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಾಡಿನ ಜನರು ಹಂಬಲಿಸಿದ್ದು, ತಮ್ಮ ಪಕ್ಷವು ಕೂಡ ಎಲ್ಲ ಸಿದ್ಧತೆಗಳೊಂದಿಗೆ ಜನರ ಆಶಯದಂತೆಯೇ ಚುನಾವಣೆ ಎದುರಿಸಲಿದೆ. ಸ್ವಚ್ಛ, ಸದೃಢ, ಸಮೃದ್ಧ, ಸಾಂಸ್ಕøತಿಕ, ಹಸಿರು ಕರ್ನಾಟಕಕ್ಕಾಗಿ ಕೆಆರ್ಎಸ್ ಪಕ್ಷ ನವಸೂತ್ರಗಳನ್ನು ರೂಪಿಸಿದೆ. ಲಂಚ ಮುಕ್ತ ಕರ್ನಾಟಕ, ದಕ್ಷ ಆಡಳಿತ ನೀಡಲು ಬಲಿಷ್ಠ ಲೋಕಾಯುಕ್ತ ತರುವುದು, ಖಾಲಿ ಹುದ್ದೆಗಳ ಭರ್ತಿ, ದಕ್ಷ ಮತ್ತು ಪ್ರಾಮಾಣಿಕ ಆಡಳಿತ, ಕಂದಾಯ ದಾಖಲೆಗಳನ್ನು ಸ್ವಚ್ಛವಾಗಿಡುವುದು, ಪೋಡಿ ಮುಕ್ತ ಗ್ರಾಮ, ಸರ್ವೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಕಾಗದ ರಹಿತ ಆಡಳಿತ, ಬ್ರೋಕರ್ ಮುಕ್ತ ಸೇವೆಗಳು, ಪೊಲೀಸ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ, ರೌಡಿ ಶೀಟರ್ ಪಟ್ಟಿ ಪರಿಷ್ಕರಣೆ, ಸುಳ್ಳು ಪ್ರಕರಣಗಳನ್ನು ವಾಪಸ್ಸು ಪಡೆಯುವುದು, ಪ್ರಾಮಾಣಿಕ ಮತ್ತು ದಕ್ಷ ಸರ್ಕಾರಿ ನೌಕರರು ಘನತೆಯಿಂದ ಕೆಲಸ ನಿರ್ವಹಿಸುವ ವಾತಾವರಣ ನಿರ್ಮಿಸುವುದು, ಆರೋಗ್ಯ, ಶಿಕ್ಷಣ, ಕೃಷಿಯಲ್ಲಿ ಅಮೂಲಾಗ್ರ ಬದಲಾವಣೆ ತುರುವುದು ತಮ್ಮ ಪಕ್ಷದ ಪ್ರಮುಖ ಅಜೆಂಡಾವಾಗಿದೆ.
ಶಾಶ್ವತ ಆವರ್ತ ನಿಧಿ ಸ್ಥಾಪಿಸಿ ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ನಿಗದಿಗೊಳಿಸುವುದು, ಮಹಿಳೆ ಮತ್ತು ಕುಟುಂಬ ಕಲ್ಯಾಣ, ಯುವಜನತೆಗೆ ಉದ್ಯೋಗ ನೀಡುವುದು, ಪ್ರಾದೇಶಿಕತೆಗೆ ಒತ್ತು ನೀಡಲು ಕಲೆ, ಭಾಷೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡುವುದು, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ, ಮರಳು ನೀತಿ ಪರಿಷ್ಕರಣೆ, ಟೋಲ್ ಸಂಗ್ರಹಕ್ಕೆ ಮುಕ್ತಿ, ಬಸ್ ಟಿಕೆಟ್ ದರ ಕಡಿತ, ವಿದ್ಯುತ್ ದರ ಇಳಿಕೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಉದ್ದಿಮೆ ಮತ್ತು ಸಂಘಟಿತ, ಅಸಂಘಟಿತ ಕಾರ್ಮಿಕರ ಕಲ್ಯಾಣ ತಮ್ಮ ಪಕ್ಷದ ಪ್ರಮುಖ ಪ್ರಣಾಳಿಕೆಗಳಾಗಿವೆ. ಈ ಕಾರಣದಿಂದ ನಾಡಿನ ಜನತೆ ಕೆಆರ್ಎಸ್ ಪಕ್ಷವನ್ನು ಬೆಂಬಲಿಸಿ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಕಾಪು ಶ್ರೀನಿವಾಸ ರೆಡ್ಡಿ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮೊಹಮ್ಮದ್ ಮುಷ್ರಫ್ಫ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಕಾವಲಿ ಮಾರೆಣ್ಣ, ಕಂಪ್ಲಿ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ರೆಡ್ಡಿ ಇನ್ನಿತರರು ಇದ್ದರು.
——