*ಗಣಿಬಾಧಿತ ಪ್ರದೇಶಗಳಲ್ಲಿ ಕೆಆರ್’ಪಿಪಿ ಅಭ್ಯರ್ಥಿಗಳನ್ನು ಕಣಕ್ಕೆ ನಿಲ್ಲಿಸಿ ; ಶಿವನಂದಯ್ಯ ಒತ್ತಾಯ*
ಬಳ್ಳಾರಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಈಬಾರಿಯ ಕರ್ನಾಟಕ ವಿಧಾನ ಸಭೆಗೆ ಗಣಿಬಾಧಿತ 10 ಕ್ಷೇತ್ರಗಳಿಂದ ಕೆಆರ್ ಪಿಪಿ ಅಭ್ಯರ್ಥಿಗಳನ್ನು ಪಕ್ಷ ಘೋಷಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಮಹಾತ್ಮಗಾಂಧಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಸಂಸ್ಥಾಪಕ ಹೆಚ್.ಎಂ.ಶಿವಾನಂದಯ್ಯ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಸಂಡೂರು, ಹೊಸಪೇಟೆ, ಬಳ್ಳಾರಿ ಗ್ರಾಮೀಣ, ಹಗರಿಬೊಮ್ಮನಹಳ್ಳಿ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ಈ ಗಣಿಬಾಧಿತ 10 ವಿಧಾನಸಭೆ ಕ್ಷೇತ್ರಗಳಲ್ಲಿ ಧರಣಿ ಹಮ್ಮಿಕೊಳಲು ನಿರ್ಧರಿಸಿದ್ದು, ಮೊದಲ ಬಾರಿಗೆ ಬಳ್ಳಾರಿಯಲ್ಲಿರುವ ಕೆಆರ್ಪಿಪಿ ಕಚೇರಿ ಮುಂದೆ ತಮ್ಮ ಕಾರ್ಯಕರ್ತರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಅಭ್ಯರ್ಥಿಗಳನ್ನು ಘೋಷಿಸಲು ಒತ್ತಾಯಿಸುತ್ತೇವೆ ಎಂದರು.
ಗಣಿಬಾಧಿತ ವಿಧಾನಸಭೆ ಕ್ಷೇತ್ರಗಳಲ್ಲಿ ಗಣಿ ಧೂಳಿನಿಂದಾಗಿ ಜನರು, ಪ್ರಮುಖವಾಗಿ ಮಹಿಳೆಯರ, ಮಕ್ಕಳ ಜೀವನ ನರಕವಾಗಿದೆ. ಇಂಥವರ ಜೀವನ ಮರುಸ್ಥಾಪನೆಯಾಗಿ ಕಲ್ಯಾಣವಾಗಬೇಕಾಗಿದೆ.
ಅದಕ್ಕಾಗಿ ಸುಪ್ರೀಮ್ ಕೋರ್ಟ್ ಘೋಷಿಸಿರುವ ಪರಿಹಾರ ಮೊತ್ತ 30,478 ಸಾವಿರ ಕೋಟಿ ಹಣ ಮತ್ತು ಆದರ ಬಡ್ಡಿ ಹಣವನ್ನು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕಾಗಿದೆ. ಬಿಜೆಪಿ, ಕಾಂಗ್ರೆಸ್, ಜನತಾದಳಗಳ ಸಂಮಿಶ್ರ ಸರ್ಕಾರ ನಡೆಸಿದವರೆಲ್ಲರೂ ಗಣಿ ಉಕ್ಕು ಉದ್ಯಮಿಗಳ, ಪ್ರಮುಖವಾಗಿ ಜೆ.ಎಸ್.ಡಬ್ಲೂನ ದಲ್ಲಾಳಿಗಳಾಗಿದ್ದು, ಅವರೆಲ್ಲರೂ ಸೇರಿ ಈ ಆರ್ & ಆರ್ ಹಣ ತಿಂದು ತೇಗಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಕಲ್ಯಾಣಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ನನಗೆ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಒಂದು ಲಕ್ಷ ಯುವಕ, ಯುವತಿಯರು ಈ ಉದ್ಯಮಗಳಲ್ಲಿ ಗುಲಾಮರಾಗಿ ದುಡಿಯುತ್ತಲೇ ಇರಲಿ ಎಂದು ರಾಜಕಾರಣಿಗಳು ಸಮಯ ಕಳೆಯುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆ ವೃಥಾ ಸಮಯವನ್ನು ಕಳೆಯುತ್ತಿದೆ. ಈ ಗಣಿಬಾಧಿತ ಜನರಿಗೆ ನ್ಯಾಯ ದೊರಕಿಸಿಕೊಡಲು ಕೆ ಆರ್ಪಿಪಿ ಪಕ್ಷದ ಶಾಸಕರಿಂದ ಸಾಧ್ಯ. ಹೀಗಾಗಿ ಜನಾರ್ದನರೆಡ್ಡಿ ಅವರು, ಬಸವಣ್ಣ ಕಲ್ಯಾಣ ರಾಜ್ಯದ ಬುನಾದಿ ಹಾಕಿದಂತೆ ತಮ್ಮ ಪಕ್ಷದಿಂದ ಕಲ್ಯಾಣ ರಾಜ್ಯವನ್ನು ಸ್ಥಾಪಿಸಲುನ ಮುಂದೆ ಬರಬೇಕು. ಅಭ್ಯರ್ಥಿಗಳನ್ನು ಘೋಷಣೆ ಮಾಡಿದಲ್ಲಿ ಇಲ್ಲಿನ ಮಹಿಳೆಯರೇ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಲ್ಯಾಣ ರಾಜ್ಯವನ್ನು ಕಟ್ಟಿಕೊಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಂಗಾಧರ ಮತ್ತು ಪ್ರವೀಣ್ ಜೆ.ಇದ್ದರು.
—-