ನಾಗೇಂದ್ರ ವಿರುದ್ಧ ರೆಡ್ಡಿ-ರಾಮುಲು ತಂಡದ ತೀವ್ರ ವಾಗ್ದಾಳಿ: “ಇನ್ನೊಮ್ಮೆ ಜನಾರ್ದನ ರೆಡ್ಡಿ ಬಗ್ಗೆ ಮಾತನಾಡಿದರೆ ಹುಷಾರ್”ಅಭಿವೃದ್ಧಿ ಬಗ್ಗೆ ಕಾಳಜಿ ಮಾಡಿ.
ಬಳ್ಳಾರಿ(2)ಕಾಂಗ್ರೆಸ್ ಶಾಸಕ ನಾಗೇಂದ್ರ ಅವರು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ನೀಡಿರುವ ಹೇಳಿಕೆಗಳಿಗೆ ಬಿಜೆಪಿ ಹಾಗೂ ರೆಡ್ಡಿ-ರಾಮುಲು ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಿರುಗುಪ್ಪ ರಸ್ತೆಯ ಹಾವಂಭಾವಿ ಪ್ರದೇಶದಲ್ಲಿರುವ ಜನಾರ್ದನ ರೆಡ್ಡಿ ಅವರ ಗೃಹ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರು ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ನಾಗೇಂದ್ರ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಳಸಿರುವ ಭಾಷೆ ಹಾಗೂ ನೀಡಿರುವ ಹೇಳಿಕೆಗಳನ್ನು ಖಂಡಿಸಿದರು. “ನಾಗೇಂದ್ರ ಅವರು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಎರಡು ಬಾರಿ ಸಚಿವ ಸ್ಥಾನ ಕಳೆದುಕೊಂಡ ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.ಮುಂದುವರಿದು ವಾಗ್ದಾಳಿ ನಡೆಸಿದ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, “ನಾಗೇಂದ್ರ ಅವರಿಗೆ ಯಾಕೋ ಮತಿ ಸರಿಯಿಲ್ಲ ಎಂದು ಅನಿಸುತ್ತಿದೆ. ಇದೇ ರೀತಿ ವರ್ತಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಬಟ್ಟೆ ಬಿಚ್ಚಿಕೊಂಡು ಬಜಾರ್ನಲ್ಲಿ ತಿರುಗುವ ಪರಿಸ್ಥಿತಿ ಬರಬಹುದೇನೋ” ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ವೈಯಕ್ತಿಕ ಟೀಕೆಗಳಲ್ಲಿ ತೊಡಗಿರುವುದು ಸರಿಯಲ್ಲ ಎಂದು ಅವರು ಹೇಳಿದರು. “ಜನಾರ್ದನ ರೆಡ್ಡಿ ಅವರ ಬಗ್ಗೆ ಪದೇ ಪದೇ ಮಾತನಾಡುವುದನ್ನು ನಿಲ್ಲಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡಿದ್ದೀರಿ ಎಂಬುದರ ಬಗ್ಗೆ ಜನರಿಗೆ ಉತ್ತರ ನೀಡಿ” ಎಂದು ಸವಾಲು ಹಾಕಿದರು.
ಮುಂದುವರಿದು ಮಾತನಾಡಿದ ಅವರು, “ಯಾರ ಉಪ್ಪು ತಿಂದಿದ್ದೀರಿ ಎಂಬುದನ್ನು ಮರೆಯಬಾರದು. ನಮ್ಮ ವಿರುದ್ಧ ಮಾತನಾಡಲು ಆರಂಭಿಸಿದರೆ ಅದಕ್ಕೆ ತಕ್ಕ ಉತ್ತರ ನೀಡಲು ನಮಗೂ ಗೊತ್ತಿದೆ. ಇನ್ನೊಮ್ಮೆ ಜನಾರ್ದನ ರೆಡ್ಡಿ ಅವರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದರೆ ನಾವು ಸುಮ್ಮನಿರುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಬಳ್ಳಾರಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಶಾಸಕ ನಾರಾ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಕುರಿತು ನೀಡಿರುವ ಹೇಳಿಕೆಗಳಿಗೆ ತಿರುಗೇಟು ನೀಡಿದರು. “ನಮ್ಮ ಸಹೋದರ ಜನಾರ್ದನ ರೆಡ್ಡಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ಬಿಂಬಿಸುವ ಅಗತ್ಯ ನಮಗಿಲ್ಲ. ನಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು ಸರ್ಕಾರದ ವ್ಯಾಪ್ತಿಯಲ್ಲಿ ನಡೆದಿವೆ” ಎಂದು ಹೇಳಿದರು.
ಸರ್ಕಾರಿ ಯೋಜನೆಗಳು ಹಾಗೂ ಕಾಮಗಾರಿಗಳಿಗೆ ವ್ಯಕ್ತಿಗಳ ಅಥವಾ ಕುಟುಂಬ ಸದಸ್ಯರ ಹೆಸರನ್ನು ಬಳಸುವ ವಿಚಾರವನ್ನು ಪ್ರಶ್ನಿಸಿದ ಅವರು, ಬಳ್ಳಾರಿಯಲ್ಲಿ ನಡೆದ ಅಂಡರ್ ಬ್ರಿಡ್ಜ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಅಕ್ರಮ ಗಣಿಗಾರಿಕೆ ಪ್ರಕರಣದ ಕುರಿತು ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧವೂ ಸೋಮಶೇಖರ ರೆಡ್ಡಿ ವಾಗ್ದಾಳಿ ನಡೆಸಿದರು. “ಜನಾರ್ದನ ರೆಡ್ಡಿ ಒಬ್ಬರೇ ಪ್ರಕರಣಗಳನ್ನು ಎದುರಿಸುತ್ತಿಲ್ಲ. ಇತರರ ಮೇಲೂ ವಿವಿಧ ತನಿಖಾ ಸಂಸ್ಥೆಗಳಲ್ಲಿ ಪ್ರಕರಣಗಳಿವೆ. ಮೊದಲು ತಮ್ಮ ಮನೆಯವರ ಮೇಲಿರುವ ಆರೋಪಗಳ ಬಗ್ಗೆ ಉತ್ತರ ನೀಡಲಿ” ಎಂದು ಹೇಳಿದರು.
ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ಸಂಸದ ತುಕಾರಾಂ ಅವರು ಜನಾರ್ದನ ರೆಡ್ಡಿ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. “ಮೊದಲು ನೀವು ಯಾವ ರೀತಿಯ ರಾಜಕೀಯ ಮಾಡಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ. ರಾಜೀನಾಮೆ ವಿಚಾರದಲ್ಲಿ ಸವಾಲು ಹಾಕುವುದಾದರೆ ಎಲ್ಲರೂ ಒಟ್ಟಿಗೆ ರಾಜೀನಾಮೆ ನೀಡಿ ಜನರ ತೀರ್ಪಿಗೆ ಹೋಗೋಣ. ನಾವು ಮುಕ್ತ ರಾಜಕೀಯಕ್ಕೆ ಸಿದ್ಧರಿದ್ದೇವೆ” ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪವನ್ನು ಉಲ್ಲೇಖಿಸಿದ ಸುರೇಶ್ ಬಾಬು, ಕಾಂಗ್ರೆಸ್ ನಾಯಕರು ಮೊದಲು ತಮ್ಮ ಮೇಲಿರುವ ಆರೋಪಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. “ಸ್ಪೀಕರ್ ಅವರ ಬಳಿ ಸಮಯ ಪಡೆದು ಎಲ್ಲರೂ ಒಂದೇ ಸಮಯದಲ್ಲಿ ರಾಜೀನಾಮೆ ನೀಡೋಣ. ಜನರ ಮುಂದೆ ಹೋಗಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ” ಎಂದು ಸವಾಲು ಹಾಕಿದರು.ಅಭಿವೃದ್ಧಿ ಬಗ್ಗೆ ಕಾಳಜಿ ಇರಲಿ ಅಂದರು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು, ಬಿಜೆಪಿ ಬಳ್ಳಾರಿ ನಗರ ಅಧ್ಯಕ್ಷ ಗುರಿರಾಂ ವೆಂಕಟರಮಣ, ಒಬಳೇಶ್, ಮೌತ್ಕರ್ ಶ್ರೀನಿವಾಸ್, ಗುಡಿಗಂಟಿ ಹನುಮಂತ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.














